ಉದಯೋನ್ಮುಖ ಬರಹಗಾರರ ಆಯ್ದ ಕೃತಿಗಳನ್ನು ಪ್ರಕಟಿಸುವ ಹಾಗೂ ಕೃತಿಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಹಲವು ಲೇಖಕ/ಲೇಖಕಿಯರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸುತ್ತಿದ್ದೇವೆ.
ಪ್ರತಿ ವರ್ಷವೂ ಈ ಯೋಜನೆಯಡಿ ಪಠ್ಯೇತರ ಮಕ್ಕಳ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಧಾರವಾಡ, ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಳ 800 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 80,000 ಉಪಯುಕ್ತ ಮಕ್ಕಳ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ‘ಪುಸ್ತಕ ಪ್ರೀತಿ’ ಬೆಳೆಸಲು ಸಹಕಾರಿಯಾಗಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಪ್ರತಿವರ್ಷವೂ ಪುಸ್ತಕಗಳನ್ನು ದಾನರೂಪದಲ್ಲಿ ನೀಡುತ್ತಾ ಬಂದಿರುವ ಸಂಘ ಸಂಸ್ಥೆಗಳ ಜೊತೆಗೆ ಸಪ್ನಾ ಬುಕ್ ಹೌಸ್, ನವಕರ್ನಾಟಕ, ಅಂಕಿತ ಪುಸ್ತಕ, ವಸಂತ ಪ್ರಕಾಶನ, ಹೇಮಂತ ಸಾಹಿತ್ಯ, ಗೀತಾಂಜಲಿ ಪಬ್ಲಿಕೇಷನ್ಸ್, ಐಬಿಹೆಚ್ ಪ್ರಕಾಶನ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ದಿವ್ಯಚಂದ್ರ ಪ್ರಕಾಶನ, ಅಕ್ಷರ ಮಂಟಪ, ಕಣ್ವ ಪ್ರಕಾಶನ, ನಿರಂತರ ಪ್ರಕಾಶನ, ರೂಪ ಪ್ರಕಾಶನ, ಸಂವಹನ, ತನುಮನು ಪ್ರಕಾಶನ ಮುಂತಾದವರೆಲ್ಲರಿಗೂ ಹಾಗೂ ಹಲವಾರು ಪುಸ್ತಕದ ದಾನಿಗಳು ಸಂತೋಷದಿಂದ ಈ ಯೋಜನೆಗೆ ಪುಸ್ತಕಗಳನ್ನು ಖರೀದಿಸಿ ನೀಡುವ ಮೂಲಕ ಸಹಕರಿಸುತ್ತಿದ್ದಾರೆ. ಅವರ ಸಹಕಾರವನ್ನು ಮುಂದೆಯೂ ಬಯಸುತ್ತಾ ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಮಕ್ಕಳಲ್ಲಿ ‘ಪುಸ್ತಕ ಪ್ರೀತಿ’ ಹಾಗೂ ‘ಕಥಾ ರಚನೆ’ಯನ್ನು ಉತ್ತೇಜಿಸುವ ಸಲುವಾಗಿ ಅತ್ಯುತ್ತಮ ಕಥಾರಚನೆಗಾಗಿ ಮುಂದಿನ ವರ್ಷಗಳಲ್ಲಿ ನಾವು ನೀಡುವ ನೂರು ಶಾಲೆಗಳಿಗೆ ನೂರು-ನೂರು ಪುಸ್ತಕ ಯೋಜನೆಗೆ ಆಯ್ಕೆಯಾಗುವ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳ ಮಕ್ಕಳಿಗೆ ಕಥೆಗಳನ್ನು ರಚಿಸುವ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮ ಕಥಾರಚನೆಗಾಗಿ ಪ್ರಥಮ ಬಹುಮಾನ ರೂ. 5,000/-ನಗದು, ದ್ವಿತೀಯ ಬಹುಮಾನ ರೂ.3,000/- ಹಾಗೂ ತೃತೀಯ ಬಹುಮಾನ ರೂ. 2,000/- ಮತ್ತು ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸುವ ಜೊತೆಗೆ ಅತ್ಯುತ್ತಮ ಕಥೆಗಳನ್ನು ಕ್ರೂಢೀಕರಿಸಿ ಮಕ್ಕಳ ಕಥಾ ಸಂಕಲನವನ್ನು ಪ್ರಕಟಿಸುವ ಹೊಸ ಯೋಜನೆಯನ್ನು ಆರಂಭಿಸಲಾಗುವುದು. ಇದಕ್ಕೆ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮ ಯೋಜನೆಗೆ ಸಹಕಾರ ನೀಡಲು ಕೋರುತ್ತೇವೆ.
ಮೌಲಿಕ ಗುಣಮಟ್ಟದ ಕೃತಿಗಳನ್ನು ಬರೆಯುವ ಹಾಗೂ ಪ್ರಕಟಿಸುವ ಲೇಖಕ, ಲೇಖಕಿ, ಯುವ ಲೇಖಕ, ಲೇಖಕಿ, ಪ್ರಕಾಶಕರು ಹಾಗೂ ಮುದ್ರಕರಿಗೆ ಅಲ್ಲದೇ ಸಾರ್ವಜನಿಕ ಗ್ರಂಥಾಲಯವನ್ನು ಉತ್ತಮವಾಗಿ ನಿರ್ವಹಿಸುವ ಗ್ರಂಥಪಾಲಕರಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುವ ಸಲುವಾಗಿ ‘ಸಾಹಿತ್ಯರತ್ನ’, ‘ಯುವ ಸಾಹಿತ್ಯ ರತ್ನ’, ‘ಪುಸ್ತಕ ರತ್ನ’ ಹಾಗೂ ‘ಮುದ್ರಣ ರತ್ನ’ ಪ್ರಶಸ್ತಿಗಳ ಜೊತೆ ಸ್ಮರಣಿಕೆ, ಪ್ರಮಾಣ ಪತ್ರ ಮತ್ತು ನಗದು ಬಹುಮಾನಗಳನ್ನು ನೀಡುತ್ತಾ ಬಂದಿದ್ದೇವೆ ಮತ್ತಷ್ಟು ಜನರಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದ್ದೇವೆ.
2022-23ನೇ ಸಾಲಿನಲ್ಲಿ 3 ಕಮ್ಮಟಗಳು ನಡೆದವು. ಮೌಲ್ಯಯುತ ಪುಸ್ತಕ ಬರೆಯುವ ಹಾಗೂ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಹಕಾರಿಯಾಗುವಂತೆ ಇಂದಿನ ಯುವಜನರಿಗೆ ಕಮ್ಮಟ ಹಾಗೂ ಶಿಬಿರಗಳನ್ನು ಏರ್ಪಡಿಸಿ ತಜ್ಞರಿಂದ ತರಬೇತಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯಾದ್ಯಂತ ಸಂಘದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸುವಂತಾಗಲು ಜಿಲ್ಲೆಗೆ ಒಬ್ಬರು ಅಥವಾ ಇಬ್ಬರಂತೆ ಕೇಂದ್ರ ಸಂಘದ ಪ್ರತಿನಿಧಿಗಳನ್ನು ಪ್ರತಿ ಜಿಲ್ಲೆಗಳಲ್ಲಿಯೂ ನೇಮಕ ಮಾಡಿ, ಸದಸ್ಯತ್ವದ ಆಂದೋಲನದ ಮುಖೇನ ಹೆಚ್ಚು ಸದಸ್ಯರನ್ನು ಸೇರಿಸಿಕೊಂಡು ಸಂಘದ ಯೋಜನೆಗಳನ್ನು ಪ್ರತಿ ಜಿಲ್ಲೆ, ತಾಲ್ಲೂಕುಗಳಿಗೂ ತಲುಪಿಸುವ ಕಾರ್ಯ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.
2023ನೇ ಸಾಲಿನ ವಿಶ್ವ ಪುಸ್ತಕ ದಿನದಿಂದ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡಿ ರುವ ಮುಖಪುಟ ವಿನ್ಯಾಸಕರು, ಕರಡು ತಿದ್ದುವವರು, ಡಿಟಿಪಿ ಮಾಡುವವರು, ಪುಸ್ತಕಗಳನ್ನು ಮುದ್ರಿಸುವ ಮುದ್ರಣಕಾರರು, ಬೈಂಡರ್ಗಳು ಹಾಗೂ ಕನ್ನಡ ಪುಸ್ತಕ ಪರಿಚಾರಕರನ್ನು ಗುರುತಿಸಿ ಅವರಿಗೆ ಗೌರವಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ.
ಸಭೆ ಸಮಾರಂಭಗಳಲ್ಲಿ ಹಾರದ ಬದಲು ಪುಸ್ತಕಗಳನ್ನು ಬಳುವಳಿಯಾಗಿ ನೀಡುವ ಮೂಲಕ ಪುಸ್ತಕ ಪ್ರೀತಿಯನ್ನು ಬೆಳೆಸುವುದು.
ಬರಹಗಾರರು, ಪ್ರಕಾಶಕರು ಹಾಗೂ ಪುಸ್ತಕೋದ್ಯಮದ ಬಂಧುಗಳು ಸಂಕಷ್ಟದಲ್ಲಿದ್ದಾಗ ಅಲ್ಪ ಆರ್ಥಿಕ ನೆರವನ್ನು ನೀಡುತ್ತಾ ಬಂದಿದ್ದೇವೆ.
ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಂಘದ ಪ್ರತಿನಿಧಿಯೊಬ್ಬರಿಗೆ ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ಸರ್ಕಾರಕ್ಕೆ ಆಭಾರಿಯಾಗಿದ್ದೇವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇವರೆಲ್ಲರೂ ಬರಹಗಾರರು, ಪ್ರಕಾಶಕರು ಹಾಗೂ ಓದುಗರಿಗೆ ತೋರುತ್ತಿರುವ ಕಾಳಜಿಗೆ ಕೃತಜ್ಞತೆಗಳು.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಘದ ಕಾರ್ಯಕ್ರಮಗಳಿಗಾಗಿ ಧನ ಸಹಾಯವನ್ನು ನೀಡುತ್ತಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಆದಾಯ ತೆರಿಗೆ ಇಲಾಖೆಯಿಂದ ಸಂಘದ ಧ್ಯೇಯೋದ್ದೇಶಗಳಿಗಾಗಿ ಸಂಗ್ರಹಿಸುವ ವಂತಿಕೆ ಹಣದ ಮೇಲೆ ಆದಾಯ ತೆರಿಗೆಯಲ್ಲಿ 12ಎಎ ಮತ್ತು 80ಜಿ ಕಲಂನಂತೆ ವಿನಾಯಿತಿ ನೀಡಿ ಸಂಘದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿರುವ ಆದಾಯ ತೆರಿಗೆ ಇಲಾಖೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಿ.ಆರ್. ನುಲ್ಟಿ ಅಂಡ್ ಅಸೋಸಿಯೇಟ್ಸ್ ರವರಿಗೂ ಧನ್ಯವಾದಗಳು.
ಸಂಘದ ಕಾರ್ಪಸ್ ಫಂಡ್ಗೆ ಕೊಡುಗೆಯಾಗಿ ಆರ್ಥಿಕ ನೆರವು ನೀಡಿರುವ ನಾಡೋಜ ಡಾ.ಕಮಲಾ ಹಂಪನಾ, ಮಂಡ್ಯ ನಗರದ ಶಾಸಕರಾಗಿದ್ದ ಶ್ರೀ ಎಂ.ಶ್ರೀನಿವಾಸ, ಲಯನ್ ಶ್ರೀ ಬಿ.ಆರ್.ಅಶೋಕ್ ಕುಮಾರ್, ಸಪ್ನ ಬುಕ್ ಹೌಸ್ ನ ಶ್ರೀ ನಿತಿನ್ ಎಸ್.ಷಾ, ಹಾಗೂ ಕೆಲವು ಪದಾಧಿಕಾರಿ ಮಿತ್ರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಸಂಘದ ಕಾರ್ಯಕ್ರಮಗಳಿಗೆ ಹಿಂದಿನಿಂದಲೂ ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಾ ಬಂದಿರುವ ಹಿರಿಯ ಸಾಹಿತಿಗಳಾದ ಡಾ. ಬರಗೂರು ರಾಮಚಂದ್ರಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಶ್ರೀ ಜಾಣಗೆರೆ ವೆಂಕಟರಾಮಯ್ಯ, ಶ್ರೀ ಸು. ರುದ್ರಮೂರ್ತಿ ಶಾಸ್ತ್ರಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಶ್ರೀ ಟಿ.ಎಸ್. ನಾಗರಾಜ್, ಮುಂತಾದ ಹಿರಿಯರಿಗೆ ನಾವು ಪ್ರೀತಿಯ ನಮನಗಳನ್ನು ಸಲ್ಲಿಸುತ್ತಿದ್ದೇವೆ.
ಸಂಘದ ಎಲ್ಲಾ ಕಾರ್ಯ ಯೋಜನೆಗಳಿಗೆ ಬೆನ್ನೆಲುಬಾಗಿ ನಿಂತು ಸರ್ಕಾರದ ಕಾರ್ಯದರ್ಶಿಯವರು, ಗೌರವಾನ್ವಿತ ಸಚಿವರು, ಸನ್ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಕರೆದಾಗ ಕನ್ನಡ ಪುಸ್ತಕೋದ್ಯಮದ ಹಿತಕ್ಕಾಗಿ ಸಂಘದ ನಿಯೋಗದ ನೇತೃತ್ವ ವಹಿಸುವ ಹಾಗೂ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ನಮಗೆ ಸದಾ ತಿಳುವಳಿಕೆ ನೀಡುತ್ತಿರುವ ಗೌರವ ಮಾರ್ಗದರ್ಶಕರಾಗಿರುವ ಹಿರಿಯ ಕವಿಗಳಾದ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರು, ಚಿಂತಕರು, ವಿದ್ವಾಂಸರು ಸಂಸ್ಕೃತ ವಿ.ವಿ. ವಿಶ್ರಾಂತ ಕುಲಪತಿಗಳಾದ ಪ್ರೊ ಮಲ್ಲೇಪುರಂ ಜಿ. ವೆಂಕಟೇಶ್, ಹಾಗೂ ಹಿರಿಯ ಸಾಹಿತಿಗಳು ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ, ನಾಡೋಜ ಡಾ.ಹಂಪ ನಾಗರಾಜಯ್ಯ, ನಾಡೋಜ ಡಾ. ಕಮಲ ಹಂಪನಾ, ಡಾ. ವಸುಂಧರ ಭೂಪತಿ, ಶ್ರೀ ವಿಶ್ವೇಶ್ವರ ಭಟ್, ಶ್ರೀ ಜಿ.ಎನ್.ಮೋಹನ್, , ಶ್ರೀ ರಾ ಸೂರಿ, ಶ್ರೀ ಸ್ವಾನ್ ಕೃಷ್ಣಮೂರ್ತಿ, ಡಾ.ಎಂ.ಎಸ್.ಮೂರ್ತಿ ಹಾಗೂ ಶ್ರೀ ರಾ.ನಂ. ಚಂದ್ರಶೇಖರ್ ಇವರೆಲ್ಲರಿಗೂ ನಾವು ಪ್ರೀತಿಯ ನಮನಗಳನ್ನು ಅರ್ಪಿಸುತ್ತಿದ್ದೇವೆ.
ಈ ಸಂಘವನ್ನು ಸ್ಥಾಪಿಸಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ಜೊತೆ ಶ್ರಮಿಸಿ ನಮ್ಮನ್ನಗಲಿರುವ ಸನ್ಮಾನ್ಯ ಶ್ರೀ ಬಿ.ಕೆ. ನಂಜುಂಡಪ್ಪ (ಭಾಗ್ಯಲಕ್ಷ್ಮಿ ಪ್ರಕಾಶನ), ಶ್ರೀ ಆರ್. ಜನಾರ್ಧನ್ (ಸಾಗರ್ ಪ್ರಕಾಶನ), ಶ್ರೀ ಕೃಷ್ಣಮೂರ್ತಿ ಕೌಶಿಕ್ (ವಿಜಯ ಸಾಹಿತ್ಯ ಪ್ರಕಾಶನ) ಹಾಗೂ ಡಾ. ಟಿ.ಎಸ್. ವಿಶ್ವನಾಥ್ (ಅಳಿಲು ಸೇವಾ ಸಂಸ್ಥೆ) ಇವರನ್ನು ಸ್ಮರಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ.
ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ, ಆರ್ಥಿಕವಾಗಿ ಹಾಗೂ ಭೌತಿಕವಾಗಿ, ಪರೋಕ್ಷವಾಗಿ-ಪ್ರತ್ಯಕ್ಷವಾಗಿ ನಮ್ಮೊಂದಿಗೆ ಸಂಘದ ಕಾರ್ಯಕ್ರಮಗಳ ಯಶಸ್ಸಿಗೆ ಸದಾ ಶ್ರಮಿಸುತ್ತಿರುವ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಯುತ ಹೆಚ್.ಕೆ. ಲಕ್ಷ್ಮೀನಾರಾಯಣ ಅಡಿಗ, ಆರ್.ದೊಡ್ಡೆಗೌಡ, ಡಾ. ಎಸ್.ಜಿ. ಮಾಲತಿಶೆಟ್ಟಿ, ಬಿ.ಕೆ. ಸುರೇಶ, ವಿ. ಹೇಮಂತ್ ಕುಮಾರ್, ಕೆ.ಎಸ್. ಮುರಳಿ,ಎಲ್.ಎನ್. ಸುನಿಲ್, ಎಂ.ಆರ್. ಗಿರಿರಾಜು, ಡಾ.ಶರಣು ಹುಲ್ಲೂರು, ಬಿ.ಎಂ. ಚಂದ್ರಕೀರ್ತಿ, ಕೆ.ಬಿ. ಪರಶಿವಪ್ಪ, ಪ್ರವೀಣ್ ಜಗಾಟ, ಎ.ರಘುವೀರ್, ಶ್ರೀಮತಿ ಪದ್ಮಲತಾ ಮೋಹನ್, ನಿಡಸಾಲೆ ಪಿ. ವಿಜಯ್, ಲಕ್ಷ್ಮೀಶ್ರೀನಿವಾಸ, ಶ್ರೀಮತಿ ಮಂಜುಳಾ ಮಾನಸ, ವಿಭಾಗೀಯ ಸಂಚಾಲಕರಾದ ಮೈಸೂರಿನ ಮಾನಸ, ಕಲಬುರ್ಗಿಯ ಡಾ. ಶ್ರೀಶೈಲನಾಗರಾಳ, ಮಂಗಳೂರಿನ ಎಂ.ಸದಾಶಿವ, ರಾಮನಗರದ ಶ್ರೀಮತಿ ಶೈಲಾಶ್ರೀನಿವಾಸ್ ಹಾಗೂ ಮಹೇಶ್ ಕುಮಾರ್ ಇವರಿಗೆ ವಿಶೇಷವಾದ ಕೃತಜ್ಞತೆಗಳು.
ಮೇಲಿನ ಎಂಟು ಅಂಶಗಳನ್ನು ರಾಜ್ಯದ ಮುಖ್ಯಮಂತ್ರಿಯವರು ಪರಾಮರ್ಶಿಸಿ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸುವ ಮೂಲಕ ಜ್ಞಾನಪ್ರಸಾರದಲ್ಲಿ ನಿರತರಾಗಿರುವ ಕನ್ನಡ ಪುಸ್ತಕೋದ್ಯಮವನ್ನು ಪೋಷಿಸಿ ಪ್ರೋತ್ಸಾಹಿಸಬೇಕಾಗಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ.
ಕನ್ನಡ ಪುಸ್ತಕೋದ್ಯಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಪುಸ್ತಕ ಪ್ರೀತಿಯನ್ನು ಉಳಿಸಿ, ಬೆಳೆಸಲು ಶ್ರಮಿಸುತ್ತಿರುವ ಸಂಘದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿ ಸಹಕರಿಸಬೇಕೆಂದು ಘನ ಸರ್ಕಾರ ಹಾಗೂ ಸರ್ವ ಸದಸ್ಯರನ್ನು ಪ್ರೀತಿಯಿಂದ ವಿನಂತಿಸುತ್ತೇವೆ.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.)
ನಂ.56/1-6, ನರಸಿಂಹಯ್ಯ ಗಾರ್ಡನ್,
ಕೊಟ್ಟಿಗೆಪಾಳ್ಯ, ಮಾಗಡಿ ಮುಖ್ಯ ರಸ್ತೆ,
ಬೆಂಗಳೂರು – 560091.
ದೂರವಾಣಿ : 9448753991 / 8660636951 / 9845201537
ಮಿಂಚಂಚೆ :
barahagararaprakashakarasangha@gmail.com
Copyright © 2023 ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.) Designed by VIKIMEDIATEC PRIVATE LIMITED