© Adrian Dreßler
 
© Adrian Dreßler
 
© Adrian Dreßler
 
© Adrian Dreßler
 
© Adrian Dreßler
 
 
 
 
 
 
 
 

ಸಂಘದ ಬಗ್ಗೆ

ನಿಡಸಾಲೆ ಪುಟ್ಟಸ್ವಾಮಯ್ಯ

ಅಧ್ಯಕ್ಷರು

ಆರ್. ದೊಡ್ಡೆಗೌಡ

ಕಾರ್ಯದರ್ಶಿ

ಪ್ರಾಸ್ತಾವಿಕ ನುಡಿ

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ

ದಿನಾಂಕ: 01-11-2003ರಿಂದ ಅಸ್ತಿತ್ವಕ್ಕೆ ಬಂದಿದ್ದು, ನಿಯಮಾನುಸಾರ ನೋಂದಣಿಯಾಗಿರುತ್ತದೆ. ನವದೆಹಲಿಯ ದಿ ಫೆಡರೇಷನ್ ಆಫ್ ಪಬ್ಲಿಷರ್ಸ್ ಅಂಡ್ ಬುಕ್ ಸೆಲ್ಲರ್ಸ್ ಅಸೋಸಿಯೇಷನ್ಸ್ ಇನ್ ಇಂಡಿಯಾ, ಬೆಂಗಳೂರು ಬುಕ್ ಸೆಲ್ಲರ್ಸ್ ಅಂಡ್ ಪಬ್ಲಿಷರ್ಸ್ ಅಸೋಸಿಯೇಷನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಹೊಂದಿರುತ್ತದೆ.

ಉತ್ಸಾಹಿ, ಕ್ರಿಯಾಶೀಲ, ಸಮಾನ ಮನಸ್ಕ ಬರಹಗಾರರು ಮತ್ತು ಪ್ರಕಾಶಕರ ಸಂಘಟಿತ ಸಂಸ್ಥೆ ಈ ಸಂಘ. ಪುಸ್ತಕ ಸಂಸ್ಕೃತಿಯ ಸರ್ವತೋಮುಖ ಅಭಿವೃದ್ಧಿ ಹಾಗೂ ಪುಸ್ತಕ ಓದುವ ಅಭಿರುಚಿಯನ್ನು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಬೆಳೆಸುವ ಮೂಲಕ ಪುಸ್ತಕ ಪ್ರೀತಿಗೆ ಸಹಕಾರಿಯಾಗುವಂತಹ ಹಲವು ಉದ್ದೇಶಗಳೊಂದಿಗೆ ಈ ಸಂಘವನ್ನು ಸ್ಥಾಪಿಸಿ, ಕಳೆದ 23 ವರ್ಷಗಳಿಂದ ಅನೇಕ ಮಹನೀಯರ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕಗಳ ಆಯ್ಕೆ ಮತ್ತು ಖರೀದಿ

ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಪುಸ್ತಕಗಳ ಆಯ್ಕೆ ಮತ್ತು ಖರೀದಿ ಪ್ರಕ್ರಿಯೆಯಲ್ಲಿನ ನ್ಯೂನತೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾ ಲೇಖಕ/ಲೇಖಕಿ–ಪ್ರಕಾಶಕ/ಪ್ರಕಾಶಕಿ/ಓದುಗರು ಮತ್ತು ಇಲಾಖೆಯ ನಡುವೆ ಸೇತುವೆಯಾಗಿ ಸಾಮರಸ್ಯದಿಂದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾ, ಪುಸ್ತಕೋದ್ಯಮವನ್ನೇ ನಂಬಿ, ಪುಸ್ತಕ ಪ್ರಕಟಿಸಿ, ಸಂಕಷ್ಟಕ್ಕೆ ಸಿಲುಕುತ್ತಿರುವ ಸಾವಿರಾರು ಕುಟುಂಬಗಳಿಗೆ ಧೈರ್ಯ ತುಂಬಿ, ಅವರ ಆತಂಕವನ್ನು ದೂರ ಮಾಡುವ ಕೆಲಸವನ್ನು ಕನ್ನಡದ ಹಿರಿಯ–ಕಿರಿಯ ಲೇಖಕರು, ಪ್ರಕಾಶಕರ ಸಹಕಾರ ಹಾಗೂ ಬೆಂಬಲದಿಂದ ಸಂಘವು ಮುಂದೆ ಸಾಗಿಸಿದೆ.

1. ಉದಯೋನ್ಮುಖ ಬರಹಗಾರರ ಕೃತಿಗಳ ಪ್ರಕಟಣೆ

ಉದಯೋನ್ಮುಖ ಬರಹಗಾರರ ಆಯ್ದ ಕೃತಿಗಳನ್ನು ಪ್ರಕಟಿಸುವ ಹಾಗೂ ವಿವಿಧ ಲೇಖಕರ ಕೃತಿಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಹಲವಾರು ಲೇಖಕ/ಲೇಖಕಿಯರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸುತ್ತಿದ್ದೇವೆ.

2. ಪುಸ್ತಕ ಸಂಸ್ಕೃತಿಗೆ ಪೂರಕವಾಗಿ ‘ನೂರು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೂರು–ನೂರು ಮಕ್ಕಳ ಪುಸ್ತಕಗಳ ವಿತರಣಾ ಯೋಜನೆ’

ಪ್ರತಿ ವರ್ಷವೂ ಈ ಯೋಜನೆಯಡಿ ಪಠ್ಯೇತರ ಮೌಲ್ಯಯುತ ಮಕ್ಕಳ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಧಾರವಾಡ, ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಬೆಂಗಳೂರು ದಕ್ಷಿಣ, ಹಾಸನ ಜಿಲ್ಲೆಗಳ 1100 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 1,10,000 ಉಪಯುಕ್ತ ಮಕ್ಕಳ ಪುಸ್ತಕಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ‘ಪುಸ್ತಕ ಪ್ರೀತಿ’ ಬೆಳೆಸಲು ಸಹಕಾರಿಯಾಗಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಗೆ ಪ್ರತಿವರ್ಷವೂ ಪುಸ್ತಕಗಳನ್ನು ದಾನರೂಪದಲ್ಲಿ ನೀಡುತ್ತಾ ಬಂದಿರುವ ಸಂಘ ಸಂಸ್ಥೆಗಳ ಜೊತೆಗೆ ಸಪ್ನಾ ಬುಕ್ ಹೌಸ್, ನವಕರ್ನಾಟಕ, ಅಂಕಿತ ಪುಸ್ತಕ, ವಸಂತ ಪ್ರಕಾಶನ, ಹೇಮಂತ ಸಾಹಿತ್ಯ, ಗೀತಾಂಜಲಿ ಪಬ್ಲಿಕೇಷನ್ಸ್, ಐಬಿಹೆಚ್ ಪ್ರಕಾಶನ, ಬಹುರೂಪಿ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಸಾಹಿತ್ಯ ಲೋಕ ಪಬ್ಲಿಕೇಷನ್ಸ್, ಸ್ನೇಹ ಬುಕ್ ಹೌಸ್, ದಿವ್ಯಚಂದ್ರ ಪ್ರಕಾಶನ, ಅಕ್ಷರ ಮಂಟಪ, ಕಣ್ವ ಪ್ರಕಾಶನ, ನಿರಂತರ, ಸಾವಣ್ಣ ಪಬ್ಲಿಕೇಷನ್ಸ್, ಜ್ಞಾನಯೋಗಿ, ಭಾರತಿ ಪ್ರಕಾಶನ, ವಾಸನ್ ಪಬ್ಲಿಕೇಷನ್ಸ್, ಸಾಹಿತ್ಯ ಪ್ರಕಾಶನ, ಪ್ರಿಸಂ ಬುಕ್ಸ್ ಮುಂತಾದವರೆಲ್ಲರಿಗೂ ಹಾಗೂ ಹಲವಾರು ಪುಸ್ತಕದಾನಿಗಳಿಗೆ ಕೃತಜ್ಞತೆಗಳು.

ಸಂತೋಷದಿಂದ ಈ ಯೋಜನೆಗೆ ಪುಸ್ತಕಗಳನ್ನು ನೀಡುವ ಮೂಲಕ ಸಹಕರಿಸುತ್ತಿದ್ದಾರೆ. ಅವರ ಸಹಕಾರವನ್ನು ಮುಂದೆಯೂ ಬಯಸುತ್ತಾ ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

3. ವಾರ್ಷಿಕ ಪ್ರಶಸ್ತಿಗಳು

ಮೌಲಿಕ ಗುಣಮಟ್ಟದ ಕೃತಿಗಳನ್ನು ಬರೆಯುವ, ಪ್ರಕಟಿಸುವ ಹಾಗೂ ಮುದ್ರಿಸುವ ಲೇಖಕ, ಲೇಖಕಿ, ಯುವ ಲೇಖಕ, ಲೇಖಕಿ, ಪ್ರಕಾಶಕರು ಹಾಗೂ ಮುದ್ರಕರಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸುವ ಸಲುವಾಗಿ ‘ಸಾಹಿತ್ಯ ರತ್ನ’, ‘ಯುವ ಸಾಹಿತ್ಯ ರತ್ನ’, ‘ಪುಸ್ತಕ ರತ್ನ’ ಹಾಗೂ ‘ಮುದ್ರಣ ರತ್ನ’ ಪ್ರಶಸ್ತಿಗಳ ಜೊತೆಗೆ ಸ್ಮರಣಿಕೆ, ಪ್ರಮಾಣಪತ್ರ ಮತ್ತು ₹10,000/- ನಗದು ಬಹುಮಾನಗಳನ್ನು ನೀಡುತ್ತಾ ಬಂದಿದ್ದೇವೆ ಮತ್ತು ಮತ್ತಷ್ಟು ಜನರಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದ್ದೇವೆ.

4. ಬರಹಗಾರ / ಪ್ರಕಾಶಕರ ಕಮ್ಮಟ ‘ಮಾಸದ ಮಾತುಕತೆ’ ಯೋಜನೆ

ಮೌಲ್ಯಯುತ ಪುಸ್ತಕ ಬರೆಯುವ ಹಾಗೂ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಹಕಾರಿಯಾಗುವಂತೆ ಇಂದಿನ ಯುವಜನರಿಗೆ ಕಮ್ಮಟ ಹಾಗೂ ಶಿಬಿರಗಳನ್ನು ಏರ್ಪಡಿಸಿ ತಜ್ಞರಿಂದ ತರಬೇತಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

5. ಸಂಘದ ಚಟುವಟಿಕೆಗಳನ್ನು ರಾಜ್ಯವ್ಯಾಪಿ ಸಂಘಟಿಸುವುದು

ರಾಜ್ಯಾದ್ಯಂತ ಸಂಘದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸುವಂತಾಗಲು ಜಿಲ್ಲೆಗೆ ಒಬ್ಬರು ಅಥವಾ ಇಬ್ಬರಂತೆ ಕೇಂದ್ರ ಸಂಘದ ಪ್ರತಿನಿಧಿಗಳನ್ನು ಪ್ರತಿ ಜಿಲ್ಲೆಯಲ್ಲಿಯೂ ನೇಮಕ ಮಾಡಿ, ಸದಸ್ಯತ್ವದ ಆಂದೋಲನದ ಮೂಲಕ ಹೆಚ್ಚಿನ ಸದಸ್ಯರನ್ನು ಸೇರಿಸಿಕೊಂಡು ಸಂಘದ ಯೋಜನೆಗಳನ್ನು ಪ್ರತಿ ಜಿಲ್ಲೆ, ತಾಲ್ಲೂಕುಗಳಿಗೂ ತಲುಪಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.

6. ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಇತರರನ್ನು ಗೌರವಿಸುವುದು

2023ನೇ ಸಾಲಿನ ವಿಶ್ವ ಪುಸ್ತಕ ದಿನದಿಂದ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುಖಪುಟ ವಿನ್ಯಾಸಕರು, ಕರಡು ತಿದ್ದುವವರು, ಡಿಟಿಪಿ ಮಾಡುವವರು, ಪುಸ್ತಕಗಳನ್ನು ಮುದ್ರಿಸುವ ಮುದ್ರಣಕಾರರು, ಬೈಂಡರ್‌ಗಳು ಹಾಗೂ ಕನ್ನಡ ಪುಸ್ತಕ ಪರಿಚಾರಕರನ್ನು ಗುರುತಿಸಿ ಅವರನ್ನು ಗೌರವಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ.

7. ಹಾರದ ಬದಲು ಪುಸ್ತಕ ಕೊಡುಗೆ

ಸಭೆ ಸಮಾರಂಭಗಳಲ್ಲಿ ಹಾರದ ಬದಲು ಪುಸ್ತಕಗಳನ್ನು ಬಳುವಳಿಯಾಗಿ ನೀಡುವ ಮೂಲಕ ಪುಸ್ತಕ ಪ್ರೀತಿಯನ್ನು ಬೆಳೆಸುವುದು.

8. ಆರ್ಥಿಕ ನೆರವು

ಬರಹಗಾರರು, ಪ್ರಕಾಶಕರು ಹಾಗೂ ಪುಸ್ತಕೋದ್ಯಮದ ಬಂಧುಗಳು ಸಂಕಷ್ಟದಲ್ಲಿದ್ದಾಗ ಅಲ್ಪ ಆರ್ಥಿಕ ನೆರವನ್ನು ನೀಡುತ್ತಾ ಬಂದಿದ್ದೇವೆ.

ಸಂಘದ ಪ್ರಯತ್ನ

ವಿವಿಧ ಲೇಖಕರ ಕೃತಿಗಳು ಹಾಗೂ ೨೦೨೪ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜ್ ಸಭಾಂಗಣದಲ್ಲಿ ದಿನಾಂಕ: ೨೩-೧೨-೨೦೨೩ರಂದು ನಡೆಯಿತು.
ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಸಂಘದ ನಿಯೋಗ ಭೇಟಿಯಾಗಿ ಚರ್ಚಿಸಿದ್ದು ಹಾಗೂ ಸಂಘದ ಸಮಾರಂಭದಲ್ಲಿ ಭಾಗವಹಿಸಿದ್ದ ಚಿತ್ರಗಳು.
ಶಿಕ್ಷಣ ಸಚಿವರನ್ನು ಭೇಟಿಯಾಗಿ ಪುಸ್ತಕೋದ್ಯಮದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿರುವುದು.
ದಿನಾಂಕ: 27-03-2023ರಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಖರೀದಿಗಾಗಿ ಹಣ ಬಿಡುಗಡೆ ಮಾಡಿಸಲು ಸರ್ಕಾರವನ್ನು ವಿನಂತಿಸಲು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿಯವರ ಬಳಿ ಸಂಘದ ನಿಯೋಗವು ತೆರಳಿ ಮನವಿ ಮಾಡಿದ ಸಂದರ್ಭ.

ಸಂಘದ ಬಗ್ಗೆ ಸಂದೇಶ